ದೇಶಾದ್ಯಂತ ಜೈನರು ಆಚರಿಸುತ್ತಿರುವ ಒಂದು ಪಾವನ ಮಹೋತ್ಸವ ಅದವೇ ಭಗವಾನ್ ಶ್ರೀಪಾರ್ಶ್ವನಾಥ ತೀರ್ಥಂಕರರ ಮೋಕ್ಷ ಕಲ್ಯಾಣ. ಇದನ್ನು ಮುಕುಟಸಪ್ತಮಿ ಎಂದು ಆಚರಿಸುತ್ತೇವೆ. ಇಂತಹ ಒಂದು ಶುಭ ಮುಹೂರ್ತದಲ್ಲಿ ಅತಿಶಯ್ ಕ್ಷೇತ್ರ ಶ್ರೀ ಜೈನರ ಗುತ್ತಿಯಲ್ಲಿ ಸಾಕ್ಷಾತ್ ಶ್ರೀಪಾರ್ಶ್ವನಾಥ ಸ್ವಾಮಿಯವರ ಜಿನಬಿಂಬ ಉತ್ಕಲನದ ಮೂಲಕ ಪ್ರಕಟಗೊಂಡ ಪಾವನ ದೃಶ್ಯಗಳನ್ನು ಕಣ್ತುಂಬಿ ಕೊಳ್ಳುವ ಭಾಗ್ಯ ನಮ್ಮದಾಗಿದೆ.
ಮುನಿಶ್ರೀ ವೀರಸಾಗರ ಮುನಿಮಹಾರಾಜರು ಈ ಕ್ಷೇತ್ರದ ಬಗ್ಗೆ ಶಾಸ್ತ್ರಗಳ ಉಲ್ಲೇಖಿತ ಆಧಾರ ಅವರಿಗೆ ದೊರೆತಿದ್ದು ಅದಲ್ಲದೇ ಮುನಿಗಳಿಗೆ ಒಂದು ತಪಸ್ಸು ಶಕ್ತಿಯಿಂದ ಆ ನಿರ್ದಿಷ್ಟ ಸ್ಥಳದಲ್ಲಿ ಆಗುವ ಕಂಪನದ ಅನುಭವದಿಂದ ಮೂರ್ತಿ ಇರುವ ಸ್ಥಳವನ್ನು ಪತ್ತೆ ಮಾಡುತ್ತೇನೆಂದು ನಮ್ಮ ನ್ಯೂಸ್ ಚಾನಲ್ ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಸದಾ ಅತಿಶಯಗಳ ಮೇಲೊಂದು ಅತಿಶಯಗಳನ್ನು ಕಾಣುತ್ತಿರುವ ಜೈನರಗುತ್ತಿ ಕ್ಷೇತ್ರದಲ್ಲಿ ಈ ಹಿಂದೆಯೂ ಶ್ರೀ ಸಮೃತ್ತನಾಥ ಆದಿನಾಥ ಮತ್ತು ಪಾರ್ಶ್ವನಾಥ ಮಾತೇ ಪದ್ಮಾವತಿ ಮೂರ್ತಿಗಳು ದೊರೆತಿದ್ದು ಭಕ್ತಾದಿಗಳ ದಂಡು ಈ ಕ್ಷೇತ್ರದೆಡೆಗೆ ಓಡೋಡಿ ಬಂದು ದರ್ಶನ ಪಡೆಯುತ್ತಿದ್ದಾರೆ. ಮುಕುಟ ಸಪ್ತಮಿಯ ಪುಣ್ಯದ ದಿನದಂದು ಪಾರ್ಶ್ವನಾಥರ ಜಿನಬಿಂಬ ಮಣ್ಣಿನ ರಾಶಿಯಿಂದ ಮೇಲೆದ್ದು ನಿಂತಾಗ ತಮ್ಮ ಕನಸಿನಲ್ಲಿ ಗೋಚರಿಸಿದ ಬಿಂಬವನ್ನು ಎದುರು ಕಂಡಾಗ ಮುನಿಶ್ರೀಗಳ ಕಣ್ಣಲ್ಲಿ ಸಂತೋಷದ ಕಣ್ಣೀರು ತುಂಬಿಕೊಂಡಿತ್ತು.
ಎರಡನೇ ಮೂರ್ತಿಗಾಗಿ ಹುಡುಕಾಟ ನಡೆಸಿದಾಗ ಎಷ್ಟು ಅಗೆದರೂ ಮಣ್ಣನ್ನು ಹೊರಹಾಕಿದರೂ ಗೋಚರಿಸದಿದ್ದಾಗ ಇನ್ನೇನು ಎಲ್ಲರೂ ಹತಾಶರಾಗಿ ಇನ್ನು ಮೂರ್ತಿ ಸಿಗುವುದಿಲ್ಲವೇನೋ ಎಂದು ಕೊಂಡಿದ್ದಾಗ ಆಗ ಮುನಿಶ್ರೀಗಳು ಇಲ್ಲಿ ಸಿಗುವಂತಹ ಮೂರ್ತಿ ಸಾಮಾನ್ಯದಲ್ಲ ವಿಶೇಷಗಳಲ್ಲೇ ಅತಿ ವಿಶೇಷ ವಾಗಿದ್ದು ನಮಗೆ ಖಂಡಿತವಾಗಿಯೂ ಮೂರ್ತಿ ಗೋಚರಿಸುತ್ತದೆಂದು ತಾವೇ ಮುಂದೆ ಬಂದು ಮಣ್ಣನ್ನು ಹೊರಹಾಕಿಸಲು ಪ್ರಾರಂಭಿಸಿದಾಗ ಅದ್ಭುತ ಎನ್ನುವ ರೀತಿಯಲ್ಲಿ ಸುಂದರ ಪಾರ್ಶ್ವನಾಥ ಪ್ರತಿಮೆ ಮಣ್ಣಿನಿಂದ ಆವೃತ್ತವಾಗಿದ್ದರೂ ಮುದ್ದಾಗಿ ನಗೆ ಬೀರುತ್ತಾ ಪ್ರತ್ಯಕ್ಷವಾಯಿತು. ಭಕ್ತಾದಿಗಳು ಜಯಘೋಷದ ಮೂಲಕ ಮೂರ್ತಿಯನ್ನು ಬಸದಿಗೆ ತಂದು ಸ್ವಚ್ಛ ಗೊಳಿಸಿ ನೋಡಿದಾಗ ಆ ಕ್ಷಣ ಕಣ್ಣಿಗೆ ಹಬ್ಬವನ್ನು ತಂದುಕೊಟ್ಟಿತು. ಮೂರ್ತಿಯ ವರ್ಣನೆ ಯನ್ನು ಅಲ್ಲಿ ಬಂದಿರುವಂತಹ ಎಲ್ಲರಿಗೂ ಸ್ವವಿವರವಾಗಿ ಮನ ಮುಟ್ಟುವಂತೆ ಹೇಳಿದರು. ಎಲ್ಲಾ ಭಾವನೆಗಳನ್ನು ಒಂದೇ ಮೂರ್ತಿಯಲ್ಲಿ ಕಾಣಸಿಗುವುದು ಬಹಳ ಅಪರೂಪ ಹಾಗೂ ಇದನ್ನು ವೀಕ್ಷಿಸಿದ ನಾವುಗಳೇ ಧನ್ಯ . ಮುಕುಟಸಪ್ತಮಿಯ ಅಂಗವಾಗಿ ಜೈನರಗುತ್ತಿ ಕ್ಷೇತ್ರದಲ್ಲಿ ನಡೆದ ಇನ್ನೊಂದು ವಿಶೇಷವೆಂದರೆ ದೇಶದೆಲ್ಲೆಡೆ ಇಂದು ಸ್ವತಂತ್ರ ದಿನಾಚರಣೆಯ ಅಂಗವಾಗಿ ತ್ರಿವರ್ಣ ದ್ವಜವನ್ನು ಏರಿಸಿ ಸಂಭ್ರಮಿಸಿದ ನಮಗೆ ಮುಕುಟ ಸಪ್ತಮಿಯ ಕಾರ್ಯಕ್ರಮದ ಅಂಗವಾಗಿ ಕ್ಷೇತ್ರದಲ್ಲಿ ಜೈನ ಧರ್ಮದ ಪ್ರತೀಕವಾದ ಪಂಚವರ್ಣಗಳ ಬೃಹತ್ ಧ್ವಜವನ್ನು ಆರೋಹಣ ಮಾಡಿ ಸಂಭ್ರಮಿಸಿದ ಘಳಿಗೆ. ಪಾರ್ಶ್ವನಾಥರಿಗೆ ಅಭಿಷೇಕ, ಹಾಗೂ ನಿರ್ವಾಣ ನಾಗವನ್ನು ಕೂಡ ಈ ಸಂದರ್ಭದಲ್ಲಿ ನೆರವೇರಿಸಲಾಯಿತು.














